ಕತ್ತಲಲ್ಲಿ ಕಳೆದು ಹೋದ ಓ... ಸೂರ್ಯ,
ನಿನಗೊಂದಿಷ್ಟು ಕರುಣೆಯಿಲ್ಲವೆ?..
ಆ ಚಂದ್ರನೋ...ಬೆಳದಿಂಗಳು ಚೆಲ್ಲಿ,
ಮೋಸಮಾಡಿಬಿಟ್ಟ
ಆ ಚುಕ್ಕಿಗಳೋ... ಕಣ್ಣು ಮಿಟುಕಿಸಿ ಸನ್ನೆಮಾಡಿ,
ಮಾಯವಾದವು
ಆ ಸಾಗರದ ಅಲೆಗಳೋ... ಮೈ ಗೆ ಸೋಂಕಿಸಿ, ತಳ ಸೇರಿ ಬಸಿದು ಹೋದವು
ಆ ತಂಗಾಳಿಯೋ... ಆಸೆ ಹುಟ್ಟಿಸಿ, ಬಿರುಗಾಳಿಯಾಯಿತು
ಆ ಮಳೆಯೋ... ಮುತ್ತಟ್ಟು ಮೈ ಮರೆಸಿ, ಮಾಯವಾಯಿತು
ಆ ಇಬ್ಬನಿಯೋ... ಮುತ್ತು ಚೆಲ್ಲಿ , ಮತ್ತೆಲ್ಲಿ ಹುಡುಕಿದರು ಸಿಗದಾಯಿತು
ಆ ಕೋಗಿಲೆಯೋ... ಹಾಡು ನಿಲ್ಲಿಸಿ, ಮನಸ್ಸು ಭಾರ ಮಾಡಿ ಹಾರಿಹೋಯಿತು
ಆ ನವಿಲೋ... ಗೆಜ್ಜೆ ಬಿಚ್ಚಿ, ನನ್ನೆದೆಗೆಸೆದು ಕೇಕೆಹಾಕಿತು
ಇಟ್ಟಿಗೆ ಬಟ್ಟಿಯಲಿ,
ಬದುಕು ಸುಟ್ಟುಕೊಂಡವರು ನಾವು
ಕನಸುಗಳನು,
ಸುಡುವ ಹಂಚಲ್ಲಿಟ್ಟು ಕರಗಿಸಿಕೊಂಡವರು
ಆಡುವ ಕಂದನ ಕೈ ಗೆ,
ಸುಡುವ ಇಟ್ಟಿಗೆ ಇಟ್ಟವರು
ಹಸಿದ ಹೊಟ್ಟಗಳನು,
ನೆಲಕ್ಕಿಟ್ಟು ಹೊಸೆದವರು
ಬಂಧು-ಬಾಂದವರ ಸಂಬಂಧ,
ಗಾಳಿಗೆ ತೂರಿದವರು
ಆಸೆ-ಆಕಾಂಕ್ಷೆಗಳನು,
ಪಟಮಾಡಿ ಹಾರಿಬಿಟ್ಟವರು
ಬದುಕಿನ ಎಲ್ಲ ಭಾವನೆಗಳನು,
ತೋರಣ ಮಾಡಿ ಕಟ್ಟಿದವರು
ಆದರೂ ನಾವು,
ಉಳ್ಳವರ ಗೋಡೆಗೆ ಅಂದವಾದವರು
ಕೊನೆಯ ನಿಲ್ದಾಣವಲ್ಲ ಇದುವೇ
ಸಾಗಬೇಕಿದೆ ಇನ್ನು
ಇದೆ ಇನ್ನೊಂದು ನಿಲ್ದಾಣವು..
ಇನೆಷ್ಟು ನಿಲ್ದಾಣವೋ.....
ಸಾಗಬೇಕಿದೆ ನಾನು
ಬದುಕ ಬೇಕಲ್ಲ
ಬದುಕುವುದಕ್ಕೆ ಸಾಗುವುದು
ಸಾಗುತ್ತಾ ಬದುಕುವುದು
ತಿಳಿಯದಲ್ಲ ನನಗೆ
ತಿಳಿಯ ಬೇಕಿದೆ ನಾನು
ತಿಳಿಸುವವರು ಯಾರು
ಹುಡುಕ ಬೇಕಿದೆ ಅವರ..
ಆದರ್ಶ ಕಲಸೆ
ನಮ್ಮ ಬಡತನ:
ಬಂಡಿಯ ನೊಗಹೊತ್ತು ಎಳೆಯುವ ಅಮಾಯಕ ಎತ್ತಿನಂತೆ,
ಬಿರುಗಾಳಿಗೆ ಸಿಕ್ಕು ಗರಗಿಟ್ಟಲೆಯಾದ ಒಣ ಎಲೆಯಂತ,
ಮೂಟೆ ಹೊತ್ತು ಊರೂರು ಸುತ್ತುವ ಕತ್ತೆಯಂತೆ,
ಉಂಡವರು ಉಂಡೆಸೆದ ಎಲೆಯೊಳಗಿನ ಅನ್ನ ಅರಸುವಂತೆ,
ಒಡೆದು ಮಾಸಿದ ಕನ್ನಡಿ ನಮ್ಮ ಬಡತನ ನಮಗೆ ತೋರಿಸುವಂತೆ,
ಆಕಾಶಕ್ಕೆ ಎಸೆದ ಆಸೆಯ ಕಲ್ಲು ಮರಳಿ ಬಂದು ನಮಗೇ ಬಡಿಯುವಂತೆ,
ಯಜಮಾನರಿಗೆ ಅಂಗಳ ಅಂಚಿನಲ್ಲಿ ಕಾವಲು ಕಾಯುವ ಚಪ್ಪಲಿಯಂತೆ,
ನಮ್ಮವರ ಕಣ್ಣುಗಳ ಅಂಚುಗಳಲಿ ತುಂಬಿಕೊಂಡ ದುಃಖದ ಚಿತ್ರಗಳಿಗೆ ಮರಳಿ ಮರಳಿ ಜೀವ ಬಂದಂತೆ,
ನಮ್ಮ ಬಡತನ.....ನಮ್ಮ ಬಡತನ..........