Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಚೆಂದ ಬಲು ಚೆಂದ

ಜೀವ ಜೀವ‌ ಸೇರಿ ಒಲವು
ಹೆಣೆದುಕೊಂಡ ಬದುಕು ಚೆಂದ!!
ನಿನ್ನ ಹೆಸರ ಜೊತೆಗೆ ನನ್ನ
ಹೆಸರ ಬರೆವ ಪದವು ಚೆಂದ!!

ಮೌನದಲಿ ಉದಿಯಾದ
ಈ ಪ್ರೀತಿಯು ಚೆಂದ!!
ಮಾತಿನಲಿ ಜೊತೆಯಾಗಿ
ನೀ ದೊರೆತದ್ದು ಚೆಂದ!!

ಕಲ್ಪನೆಗೂ ಮಿಗಿಲಾದ
ಭಾವಗಳು ಬಲು ಚೆಂದ!!
ವಿರಹದಲೂ ಖುಷಿ ನೀಡೋ
ನಿನ್ನ ನೆನಪದು ಚೆಂದ!!

ನಾ ನೋಡೋ ಲೋಕವೆಲ್ಲ
ಹೊಸತಾದದ್ದು ಚೆಂದ!!
ಈ ಪ್ರೀತಿಯ ಆನಂದ
ಚೆಂದ ಬಲು ಚೆಂದ!!

- ಪಿ.ಜಿ.ಜ್ಯೋತಿ

21 Jan 2017, 09:17 pm

ನೀನಿದ್ದರೆ ಕಣ್ಮುಂದೆ...

ನೀನಿದ್ದರೆ ಕಣ್ಮುಂದೆ...
ಸಂತೋಷಕ್ಕೆ ಪಾರವೇ ಇಲ್ಪದಂತೆ,
ಆ ಮರದಲ್ಲಿರುವ ಕೋಗಿಲೆ ಹಾಡುವುದಿಲ್ಲವೆ?,
ನೀನಿದ್ದರೆ ಕಣ್ಮುಂದೆ...
ಎಲ್ಲ ಹಕ್ಕಿಗಳು ನಿನ್ನ ಜೊತೆ ಮಾತನಾಡಲೆಂದು ನಾ ಮುಂದು ತಾ ಮುಂದು ಎನ್ನುತ್ತ ಚಿಲಿಪಿಲಿಯ ಧ್ವನಿಯೊಂದಿಗೆ ಜಗಳವಾಡುವುದಿಲ್ಲವೆ?,

ನೀನಿದ್ದರೆ ಕಣ್ಮುಂದೆ...
ಕಡಲದಲ್ಲಿನ ಅಲೆಗಳು ಕುಣಿದು ಕುಪ್ಪಳಿಸಿ,
ತೀರಕ್ಕೆ ಬಂದು ನಿನ್ನ ಹೆಜ್ಜೆಯನ್ನು ಸ್ಪರ್ಶಿಸಿ
ಹೋಗುವುದಿಲ್ಲವೆ?,

ನೀನಿದ್ದರೆ ಕಣ್ಮುಂದೆ...
ಆ ಹೂವುಗಳು ನಾಚಿ ತಲೆದೂಗುವುದಿಲ್ಲವೆ?,

ನೀನಿಲ್ಪದೆ ಕಣ್ಮಂದೆ...
ಬರಡಾಯಿತು ಜಗತ್ತು ನನ್ನ ಮುಂದೆ.

- ಮುತ್ತು

21 Jan 2017, 09:11 pm

#ಅವಳಧ್ಯಾನ....

ತುರುಬು
ಹ್ಯಾಂಗಾದ್ರು
ಕಟಗೊ..

ನಾ ಕೊಟ್ಟ ಗುಲಾಬಿ
ಜೋಪಾನ
ಇಟಗೊ..

ಈಗಷ್ಟೆ ಬರಿಯಾಕ
ಹತ್ತೀನಿ
ಇನ್ನು ಮುಗಿದಿಲ್ಲ

ಮುಡಿಯಲ್ಲಿ
ಮಗುವಿನಾಂಗ ಮಲಗಿದೆ
ಪುಟ್ಟ ಗುಲಾಬಿ..

ಎಲ್ಲ
ಸೀರೆಯಲ್ಲಿಯೂ ಒಬ್ಬ
ಸುಂದರಿಯಿರುತ್ತಾಳೆ.

ಕಂಬನಿ ಅಂದ್ರೆ
ಶಾಪಗ್ರಸ್ತ
ಕಣ್ಣಿನ ಮೊಳಕೆ

ಹನಿಯಿದ್ದಾಗಲೆ
ಚಿವುಟಿಬಿಡು ಮತ್ತೆ
ಕುಡಿಯೊಡೆಯದಿರಲಿ..

ಇಳಿಯೋ ಹೊತ್ತಿಗೆ
ನೋಡಿಕೋ ಪೂರಾ ಕವಿತೆ
ಕಳಿಸಿರ್ತೆನಿ..

-- ರಾಘವೇಂದ್ರ

- ರಾಘವ

21 Jan 2017, 04:38 pm

ರಾಮನ ದಾರಿ

ಗೆಲ್ಲಲಾಗದ ನಗರದ ಹತ್ತು ತೇರಿನ ಗಾಲಿಗಳ
ಏಳು ಹೊರಳಿನಲಿ ಭೂಮಿಗಿಳಿದ ಮರ್ಯಾದೆ ಪುರುಷ
ಜೊತೆಗೆ ಭೂಮಿಯ ಭಾರ ಹೊತ್ತವನ ಶೇಷಾಂಶ !
ಮತ್ತೊಂದು ಮಂಥನದ ಸುತ್ತಿನುರುಳಿಗೆ ಅರಸೊತ್ತಿಗೆ ಬಿಟ್ಟು-
ಕೊಟ್ಟು ನಡೆದ,ಕಾಡಿನತ್ತ....ಸಂತೋಷದಿಂದಲೇ. ಜೊತೆಗೆ
ಹಿಡಿದ ಉತ್ತ ಮಣ್ಣಗೆರೆಯಂಥ ದಾರಿ!
ಕಾಡಿನೆಡೆಗಿನ ನಡೆಯಲ್ಲಿ ಕಾಡಿತ್ತು,-ಋಷಿ ಮುನಿಗಳ
ಜಾಡಿತ್ತು-ಹಾಡಿತ್ತು.ಐದು ಮರಗಳ ತೋಪಲ್ಲಿ
ಬೇಡಿತ್ತು.ಅಗಲ ಉದ್ದದುಗುರ ಹೆಣ್ಣು.ಕಾಮದ ಕಣ್ಣು,
ಮೂಗ ಹುಣ್ಣು-ಎದೆಯ ಬೆನ್ನು!
*
ಮಣ್ಣಮಗಳಿಗೆ ಚಿನ್ನ ಮೃಗದ ಆಸೆ
ಚಿನ್ನದೂರವಗೆ ಮಣ್ಣ ಸೇರುವಾಸೆ!
ಮಾಯಾಮೃಗದ ಓಟದ ದಾರಿ ಉತ್ತರದ
ದಿಕ್ಕ ಬದಲಿಸಿತು.ಹೊರಳಿಸಿತು-ಉರುಳಿಸಿತು.
ದಕ್ಷಿಣದ ಹತ್ತುತಲೆ ಹುಳ ಉತ್ತರಕೆ ಹತ್ತುತಲೆ ಇತ್ತು
ಮಣ್ಣು ತಿನ್ನಲು ಕಾತರಿಸುತ್ತಲೆ ಇತ್ತು.
ಉತ್ತ ಮಣ್ಣಿನ ಗೆರೆ ದಾರಿ-ತಪ್ಪಿ ಶೇಷ ಗೆರೆ ದಾಟಿ...ದಾಟಿ...
ಪ್ರಕೃತಿ,ಪುರುಷನ ದಾಟಿ...ಪಕ್ಷಿ ಹೃದಯವ ಮೀಟಿ...
ಮಣ್ಣಿನ ಧೂಳನು ಹೊಕ್ಕಿಸಿತು-ಹತ್ತು ತಲೆ ಹುಳ
ಚಿನ್ನದೂರಿಗೆ ಮುಸುಕಿಸಿತು-ಸಂಕಟದ ಜಾಲ.
...
ಪ್ರಕೃತಿಹೀನಗೆ ಗಾಳಿ-ಬೆಳಕುಗಳ ಅಂಶ ಸಾಂಗತ್ಯ
ಹಣ್ಣು ಹಣ್ಣು ಮುದುಕಿಯ ಎಂಜಲ ಹಣ್ಣ ಆತಿಥ್ಯ!
ಬಾಲ ಬಲಿಗೆ ವನಧರ್ಮದ ಪಾಠ-ಅನುಗ್ರಹದ ಶಿಕ್ಷೆ!
ಬೆಳಕ ಅಂಶಕ್ಕೆ ಸುವಚನದ ಕಂಠಕ್ಕೆ ಗೆಳೆತನದ ದೀಕ್ಷೆ!

ದುಃಖವಿಲ್ಲದ ಕಾಡಲ್ಲಿ ಕಾಡಲೆಳಸಿದ
ಹತ್ತುತಲೆಹುಳದಬ್ಬರಕೆ-ಶೃಂಗಾರದಾಭಾಸಕ್ಕೆ
ಒಮ್ಮೆ ಕಂಪಿಸಿದ ಭೂಮಿ,ಬಾನಂತೆ ಗುಡುಗಿತ್ತು ಮತ್ತೊಮ್ಮೆ!
ಗಾಳಿ-ನೀರನು ದಾಟಿ,ಭೂಮಿಯನು ಸಂತೈಸಿ
ಪುರುಷ ವೃತ್ತಾಂತವನು ಅಗ್ನಿ ಸಾಕ್ಷೀಕರಿಸಿತು.
ಗೆಲ್ಲಲಾಗದ ನಗರದ ಮರ್ಯಾದೆ ಪುರುಷನಿಗೆ ಸಿದ್ಧವಾಗಿತ್ತು
ಯುದ್ಧಭೂಮಿ,ಚಿನ್ನದೂರಿನಲ್ಲಿ!ಮಣ್ಣಿಗಾಗಿ!
ಹೆಣ್ಣಿಗಾಗಿ!ಸ್ತ್ರೀಕುಲದ ಕಣ್ಣಿಗಾಗಿ!ಪ್ರಕೃತಿಗಾಗಿ!
ಮಣ್ಣ ತಿನ್ನಲೆಳಸಿದ ಹುಳ ತಾನೆ ಮಣ್ಣಲ್ಲಿ ಮಣ್ಣಾಯಿತು!
ಗಾಳಿ ದಾರಿಯಲಿ ಹೂವ ತೇರನು ಏರಿ
ಪ್ರಕೃತಿ-ಪುರುಷರ-ಗೆಲ್ಲಲಾಗದ ನಗರದತ್ತಣ ಪಯಣ
ಇದು ರಾಮನ ದಾರಿ! ಇದುಪುರುಷನ ದಾರಿ!ಹೆಸರಿದಕೆ ರಾಮಾಯಣ!
ಇನ್ನೆಲ್ಲ ಪ್ರಶ್ನೆಗಳೆ ಹುಟ್ಟಿಕೊಂಡ
ಪ್ರಕೃತಿಯ ಉತ್ತರಕಾಂಡ!

ರಾಜ್ಯಸುಖದನುಭೂತಿ ಪ್ರಕೃತಿ- ಪುರುಷರಿಗೆ
ಪ್ರಜಾವರ್ಗಕ್ಕೆ, ತಳದಿಂದ ಉಪ್ಪರಿಗೆ.
ರಾಜಧರ್ಮದ ಕ್ಷಿತಿಜ ವಿಸ್ತರಿಸೆ--ಯಶದ ಖಜಾನೆ ತುಂಬಿ
ತುಂಬಿ ತುಳುಕಾಡಿತು.
ಇಂತೆಲ್ಲ ಸುಖದಿ ಮುಗಿಯಿತೆಂಬ ಕಾಲಕ್ಕೆ.....
ಚಿಗುರೆರಡು ಮೊಳೆತು ಪ್ರಕೃತಿ ತುಂಬಿದ ಕಾಲಕ್ಕೆ-
ಸುಖದ ರಾಜ್ಯದ ತಳದ ಬದುಕಿನ ತಳಮಳ
ಉಪ್ಪರಿಗೆಯ ಹಂತಕ್ಕೆ ದಾಂಪತ್ಯ ಜಗಳ
ಅರಸ-ಅಗಸರಿಲ್ಲಿ ನಿರಾಕರಣದಲ್ಲಿ ಸಮಬಲ, ನಿರಾಕರಣ ಕಾರಣ ಒಂದಕ್ಕೊಂದು ತಳುಕು
ಪ್ರಕೃತಿ-ಪುರುಷರ ದಾರಿಯಲಿ ಬಿರುಕು,
ಪುನಃ ಪ್ರಕೃತಿ ದಾರಿಯಲಿ ಶೇಷ ಸಹಕಾರ ಪಯಣ
ತುಂಬು ಪ್ರಕೃತಿಯ ಮೇಲು ಶೂನ್ಯ ಪುರುಷಕರುಣ!
ಇಲ್ಲಿ ಶೇಷಾಂಶ ಗೆರೆ ಎಳೆಯಲೆ ಇಲ್ಲ,,!ಎಲ್ಲ ಮುಕ್ತ..ಮುಕ್ತ....
***** *****
ಹುತ್ತ ಕಟ್ಟಿದ ಮಣ್ಣ ಒಳಗಣ್ಣ ಕವಿಋಷಿಗೆ
ಉತ್ತ ಮಣ್ಣ ಗೆರೆಯ ಹೆಣ್ಣ ನೋವಿನಲು ಖುಷಿಗೆ
ಆಸರೆಯಾಗುವ ಕಾರುಣ್ಯಮನಸು,
ಸಾಕಾರ ಕ್ರೌಂಚ ವಿಯೋಗದ ಕನಸು.
ಬದುಕ ದ್ವಂದ್ವಕೆ ಸ್ಪಂದ-ಕುಶಲವಾದ ಫಲಸಿದ್ಧಿ
ಪುತ್ರಕಾಮೇಷ್ಟಿಯಿಲ್ಲದೆ ರವಿಕುಲದ ವೃದ್ಧಿ...ವೃದ್ಧಿ.

ಕವಿಮನೆಯಲ್ಲುರಿಯಿತು ಪ್ರಕೃತಿಮನದ ಕ್ಷಾತ್ರತೇಜ
ಪುರುಷಚರಿತೆಯ ವಿರಹದುರಿಯ ಹತಾಶಬೀಜ!

ಅತ್ತ ನಗರದಲಿ----

ಕುದುರೆಯಜ್ಞದ ದೀಕ್ಷೆ;ಪ್ರತೀಕ್ಷೆಯಲ್ಲಿ ಕೀರ್ತಿ
ಮತ್ತೆ ಚಿನ್ನದ ಮಣ್ಣು ದೀಕ್ಷಿತನ ಸಹವರ್ತಿ

ಇತ್ತ ಕಾಡಿನಲಿ------

ತಿರುಗುತ್ತ ಬಂದ ಕುದುರೆಗೆ ಬಂಧನದ ಕಾಟ
ಪುರುಷ ಶಕ್ತಿಯ ಎದುರು ಪ್ರಕೃತಿಮಕ್ಕಳ ಆಟ.
ಯೋಗಾಯೋಗದಲಿ ಕವಿಹೃದಯ ಚಮತ್ಕಾರ
ಪ್ರಕೃತಿಕುಡಿಗಳಿಗೆ ಪುರುಷಮನ ಸಾಕ್ಷಾತ್ಕಾರ

ಮತ್ತೆ ಕವಿ ಕಾರುಣ್ಯದಲಿ ಪ್ರಕೃತಿ-ಪುರುಷರ ಮಿಲನ
ತಳದಿಂದ ಉಪ್ಪರಿಗೆಗೇರಿದ ದಾಂಪತ್ಯ ಸಂಕಲನ
ಮುಗಿತಾಯವಿಲ್ಲಿಗೆ ಪ್ರಶ್ನೆಗರ್ಭದ ಉತ್ತರ ರಾಮಾಯಣ!!

*******ಪದ್ಯಾಣ ಗೋವಿಂದ ಭಟ್ಟ.

- padyana

21 Jan 2017, 03:36 pm

ಬ್ಯಾಚಲರೊಬ್ಬನ ಒಲವ ಭ್ರಮೆ-ವಾ

ಒಲವೇ,
ನೀನು ಕೇವಲ ಕಲ್ಪನೆ.
ನನ್ನ ಪಾಲಿಗೆ
ಒಂದು ಭ್ರಮೆ.
ಕ್ಷಣಭಂಗುರ.

ದಿನಕೊಂದು ರೂಪ.
ದಿನಕೊಂದು ಮುಖ.
ಬರೀ ಆ ಹೊತ್ತಿನ ಮೋಹ.
ಆ ಕ್ಷಣದ ದಾಹ.
ತೀವ್ರ ಉತ್ಕಟತೆ.
ಕಲ್ಪನೆಯಲ್ಲೇ ರಮಿಸುತ್ತೇನೆ.
ಸಂಭ್ರಮಿಸುತ್ತೇನೆ. ಸ್ರವಿಸುತ್ತೇನೆ.

ಮರುಕ್ಷಣ ವಾಸ್ತವಕೆ.

ಕಟುವಾಸ್ತವಕೆ.
ಆ ದಾಹವೇನೋ ಇಂಗಿದೆ.
ಈ ಹಸಿವು....???
ಹೋಗುವುದೆಲ್ಲಿಗೆ ರಾತ್ರಿ ಊಟಕೆ...???
ಮತ್ತೇ ಅದೇ ಮೆಸ್ಸಿಗಾ...???!!!!
ಇಲ್ಲಾ ಗೂಡಂಗಡಿಗಾ...???

- Ugnil

21 Jan 2017, 01:27 pm

ನೋವು

ಬದುಕಿದು ಕಗ್ಗತ್ತಲ ನೀರವ ಮೌನ
ಯಾರಿಗೂ ಕಾಣದ ಕತ್ತಲಲ್ಲಿ ಕಣ್ಣೀರದೇ ಧ್ಯಾನ
ನಗುವಾಗಲು ಅನುಭವಕೆ ಬಾರದು ಸಂತಸ
ಅತ್ತಾಗಲು ದೂರಾಗವು ಕಂಡ ನೋವುಗಳು, ವಿಪರ್ಯಾಸ

ಕತ್ತಲಲಿ ಕಣ್ಣ ನೀರು ಜಾರುತಿದೆ ಕೆನ್ನೆಯ ಸವರಿ
ಅದು ಕೂಡ ಉಳಿಸುತಿದೆ ಮತ್ತಷ್ಟು ನೆನಪುಗಳ
ಕೆನ್ನೆಯ ಮೇಲೆ ತಾ ಜಾರಿದ ಕುರುಹ ಉಳಿಸಿ
ತಲೆದಿಂಬಿಗೂ ಭಯವೇನೋ ಸುರಿವ ಮಹಾಪೂರ ಮಳೆಗೆ ಹೆದರಿ

ನಗುವಾಗಲು ಕಾಡುವುದು ಮನಸೆಂಬ ಮಾಯೆ
ಕಣ್ಣಂಚಲಿ ತಂದು ನಿಲ್ಲಿಸುವುದು ನೋವಿನ ಛಾಯೆ
ಬಾಗಿ ನಗುತಿರಲು ತುಟಿಗಳು, ತುಂಬಿ ಬಂದಿವೆ ಕಣ್ಣುಗಳು
ಒರೆಸಲು ಚಾಚಿ ಬಂದರು ಕೈಗಳು,
ಏನೋ ಬಿತ್ತು ಕಣ್ಣಿಗೆ ಎಂದು ನುಡಿದಿವೆ ನಗುವ ತುಟಿಗಳು.

ಮನಸ್ಸಿದು ಅಳುಕಿ ಅಳುತಿದೆ ಕ್ಷಣಕ್ಷಣವೂ
ಮತ್ತೆ ಮತ್ತೆ ಕಾಣುತ್ತಿರುವ ಸೋಲುಗಳ ನೆನೆದು
ಸಾವಿಗೂ ದೂರ ನೋವು ಕಂಡ ಮನಸುಗಳು
ಕಾಣದೆ ದಾರಿ ಮತ್ತೆ ಮತ್ತೆ ಬದುಕುತಿವೆ ನಂಬಿ ನಾಳೆಗಳಲಿ ಕಾಣಬಹುದು ಬಾಳ ಬೆಳಗುವ ಕಿರಣಗಳು.

- ಶ್ರೀಕಾವ್ಯ

21 Jan 2017, 10:31 am

ಕಣ್ಮಣಿ

ಕನಸಿನ ಕಣ್ಮಣಿ ಎನೆಂದು ಹೆಸರಿಡಲೆ ನಿನಗೆ
ಆವ ಗುಣಕ್ಕಾಗಿ ಆವ ಹೆಸರಿಡಲಿ
ಮುಗ್ಧತೆಗೊ, ಮೌನಕೋ
ಚಂಚಲತೆಗೊ, ಚೆಂದಕೋ
ಬೆಡಗಿನ ಬಿನ್ನಣಕೋ........?
. . .
ಬರಿದೆ ಕಣ್ಮಣಿ ಎಂಬುದೆ ಸೊಗಸಲ್ಲವೇ...!

- ಶ್ರೀ

20 Jan 2017, 11:03 pm

ಅವ್ವ

ನಾ ಒಡಲಲ್ಲೆ ಇದ್ದೇನೆ ಎಂದಾಗ ಖುಷಿಪಟ್ಟಳು..ಒಡಲಲ್ಲೆ ಬಗೆ-ಬಗೆಯ ತಿಂಡಿ-ತಿನಿಸುಗಳನ್ನು ತಿನಿಸಿದಳು..
ತಾನು ಈಗ ಎರಡು ಹೃದಯದ ಒಂದೇ ದೇಹ ಎಂದು ಸಂತೋಷಪಟ್ಟಳು...
ನಾ ಉದರದಲ್ಲೆ ಒದ್ದರೂ,ಹೊಡೆದು-ಒದ್ದಾಡಿದರು ಸಹಿಸಿಕೊಂಡಳು..
ಭೂಮಿಗೆ ನಾ ಬರುವ ಮುಂಚೆಯೇ ಪ್ರೀತಿಸುತ್ತಿದ್ದಳು..
ಭೂಮಿಗೆ ಬಂದ ಮೇಲೆಯೂ ಪ್ರೀತಿಸುತ್ತಿರುವಳು..
ಭೂಮಿ ಬಿಟ್ಟು ಹೋದ ಮೇಲೆಯೂ ಪ್ರೀತಿಸುವಳು...
ಅವಳೇ ಅವ್ವ. ..ಅವ್ವನೇ ಎಲ್ಲಾ. .
ಅವಳಿಲ್ಪದಿದ್ದರೆ ಏನೂ ಇಲ್ಲಾ..

- ಮುತ್ತು

20 Jan 2017, 08:09 pm

ಬಯಲು ಮನಸು

ಅದೋ, ಕಣ್ಣ ಮುಂದಿಹುದು ಸವಿಸ್ತಾರ ಬಯಲು.
ಹಸಿರು ಮರಗಳೂ ಉಂಟು,
ಅಲ್ಲಿ ಒಣ ಭೂಮಿಯೂ ಉಂಟು.
ಕಲ್ಲು ಮುಳ್ಳುಕಂಟಿಗಳೂ ಉಂಟು.
ಹಣ್ಣು ಹೂವು ಪೊದೆಗಳೂ ಉಂಟು.

ಇದೋ, ನನ್ನೊಳ ಮನವೂ ವಿಶಾಲ ಬಯಲು. ನೋವೂ ಉಂಟು, ಅಲ್ಲುಂಟು ನಲಿವೂ.
ಕೆಡುಕೂ, ಒಳಿತೂ ನೂರೆಂಟು.
ಕಹಿಘಳಿಗೆಗಳೂ, ಸವಿನೆನಪುಗಳೂ ಹಬ್ಬಿವೆ.
ಸೋತಬಿಕ್ಕುಗಳೂ, ಗೆದ್ದಕೇಕೆಗಳೂ ತುಂಬಿವೆ

ಇರುವಂತೆ, ಕಲ್ಲು ಕಂಟಿಗಳ ಮುಳ್ಳುಪೊದೆಗಳ ನಡುವಲೇ ಒಂದು ಕಾಲುದಾರಿ,
ನನ್ನ ಮನದಲೂ ಇರುವುದು ಆ ಎಲ್ಲ ಗೊಂದಲ
ನಡುವಲೇ ಹಾದಿ, ಸೇರಲು ಗುರಿ.



ನನ್ನೊಳ ಮನವೂ ವಿಶಾಲ ಬಯಲು.

- Ugnil

20 Jan 2017, 06:44 pm

"ನಮ್ಮ ಕನ್ನಡ" ____________

ಅರಳಲಿ ಕನ್ನಡ
ಜನಮನ ವನದಲಿ
ಗೀತೆಯಾಗಲಿ ಕನ್ನಡ
ಗಾಯಕರ ಕೊರಳಲಿ
ಮಂತ್ರವಾಗಲಿ ಕನ್ನಡ
ಮಕ್ಕಳ ನಾಲಿಗೆಯಲಿ
ಮಾತೆಯಾಗಲಿ ಕನ್ನಡ
ನಾಡಿವಾಸಿಗಳ ಮನದಲಿ
ಬೆಳಗಲಿ ಕನ್ನಡ
ಸರ್ವರ ಹೃದಯ ದೇಗುಲದಲಿ!
_________________________
ಬಸವಪ್ರಿಯ

- ಬಲವಂತ ಮೋರಟಗಿ(ಬಸವಪ್ರಿಯ)

20 Jan 2017, 06:23 pm