ಆಕ್ಸಿಡೆಂಟ್ ಆಗಲಿರುವ ಬಸ್ ಹತ್ತಿರುವೆ
ಕಿಟಕಿ ಪಕ್ಕದ ಸೀಟೊಂದನು ಹಿಡಿದಿರುವೆ
ಕನಸುಗಳ ಕತೆಯೊಂದನು ಕಣ್ಣಲ್ಲಿ ಇಟ್ಟಿರುವೆ
ಹಿಂದೆ ಸರಿಯುತಿರುವ ನೆನಪ ನೆನೆಯುತಿರುವೆ
ಕಣ್ಣ ಮುಂದೆ ಬರುತಿರುವುದೆಲ್ಲವ ಸವಿಯುತಿರುವೆ
ಮುಂಬರುವ ದೃಶ್ಯಗಳ ಕಾಯುತಿರುವೆ
ಖಾಲಿ ಬಂಡೆ ಕಲ್ಲಿನ ಮೇಲೆ ನಿನ್ನ ಹೆಸರು ಗೀಚಿದ್ದೆ..
ನೀನು ಮರಳಿನ ಮೇಲೆ ನನ್ನ ಹೆಸರು ಬರೆದೆ..
ಜೋರಾಗಿ ಅಪ್ಪಳಿಸಿದ ಸಾಗರದಲೆ ನನ್ನ ಹೆಸರನ್ನ ಮಾಯ ಮಾಡಿತ್ತು..
ನಾ ಗೀಚಿದ ಅಕ್ಷರಗಳು ನನ್ನ ನೋಡಿ ನಗುತ್ತಿತ್ತು..
ಅವತ್ತು ಸಾಗರದ ಅಲೆ ನಮ್ಮ ಭವಿಷ್ಯದ ಮುನ್ಸೂಚನೆ ನೀಡಿತ್ತು..
ಅಂದು ಅಳಿಸಿ ಹೋಗಿದ್ದು ಬರೀ ಹೆಸರುಗಳು ಮಾತ್ರ..
ಇಂದು ನೀ ನನ್ನ ಮರೆತಿರಬಹುದು ಆದರೆ ಹೃದಯಲ್ಲಿ ಗೀಚಿರುವ ನಿನ್ನ ನೆನಪುಗಳ ನಾ ಹೇಗೆ ಅಳಿಸಿ ಹಾಕಲಿ..
ಅವಳದೊ ಸರಳ ಸುಂದರ ಬದುಕಿನ ಸ್ತುತಿ
ಬದುಕುತಿತ್ತು ಮುಗ್ಧ ಗಿಳಿಯ ರೀತಿ
ಹಾರುತಿತ್ತು ಎಲ್ಲೆ ಇಲ್ಲದೆ ಎಲ್ಲವ ಸುತ್ತಿ
ಮೂಕ ಹಕ್ಕಿಯ ಕನಸಿಗಿರಲಿಲ್ಲ ಪರಿಮಿತಿ
ಬಂದನು ಚೆಲುವ ಬಂಗಾರದ ಪಂಜರ ಹೊತ್ತಿ
ಮೋಹಕೆ ಸೋತು ಸಿಲುಕಿತು, ಪಂಜರವ ಹತ್ತಿ
ಎಲ್ಲಿ ನೋಡಿದರು ಪಂಜರದ ಮಿತಿ
ಇನ್ನು ಸರಳುಗಳ ಒಳಗಿನದೇ ಭೀತಿ
ಹೊತ್ತು ತಂದ ಬಂಧನದಲಿ ಕಾಣಲಾಗದ ಪ್ರೀತಿ
ತೂಗಿತ್ತು ಅವಳ ಮನದ ಮೇಲೆ ನೋವಿನ ಕತ್ತಿ
ಕಂಡವರಿಗಾಗಿ ಆಡುತಿತ್ತು ಮಾತು, ಕನಸ ಝರಿಯೇ ಬತ್ತಿ
ಅದರೊಳಗೂ ಬದುಕುವುದು ಅದರ ಅನಿವಾರ್ಯ ಸ್ಥಿತಿ
ಓ ಬದುಕೇ,
ನಿಜಕ್ಕು ನೀ ಘೋರವಾಗಿರುವೆ.
ಓ ಮುಗ್ದ ಮನವೇ,
ನಿಜಕ್ಕು ನೀ ಏಕೆ ಹೀಗಿರುವೆ.
ಮರುಭೂಮಿಯ ಯಾನಕೆ
ನೀ ಏಕೆ ದಾರಿ ಸವೆಸುತಲಿರುವೆ?
ಮಾಯದ ಮರೀಚಿಕೆಯನು ಹಿಂಬಾಲಿಸಿ.
ಗುರಿ ಇರದ ಪಯಣಕೆ
ನೀ ಏಕೆ ಸಜ್ಜಾಗುತಲಿರುವೆ?
ಬಿಸಿಲ ಕುದುರೆಯ ಬೆನ್ನ ಹತ್ತಿ.
ನಿನ ಮುಗ್ದತೆಗೆ, ಅದರ ನಗುವಿಗೆ
ನೀ ಹೆಜ್ಜೆ ಇಡು....