ಯಾವುದೊ ಹಕ್ಕಿಯ ಹಿಕ್ಕೆಯಲಿ ಬಿದ್ದು
ಮೊಳಕೆಯೊಡೆದ ಸಸಿ ನಾನು...!!
ಮಳೆಯ ಆಸರೆಯಲ್ಲಿಯೆ ಬದುಕು
ಕಟ್ಟಿಕೊಂಡ ಬವಣೆ ನನ್ನದು..!!!
ಅದೇಷ್ಟೊ ದನ-ಕರು ಕುರಿ-ಮೇಕೆಗಳ
ಬಾಯಿಂದ ಉಳಿದು ಅಡಿಗಳೆತ್ತರ ಬೆಳೆದು
ಬಿರುಗಾಳಿಯ ಹೊಡೆತಕ್ಕೆ ನೆಲಮುಟ್ಟಿ ಎದ್ದು ಮತ್ತದೆ ಬಾಯಾರಿಕೆಯಲಿ ಹನಿ ಮಳೆಗಾಗಿ ಕಾದು...!!
ಹತ್ತು ಹಲವು ವರ್ಷಗಳ ನಂತರ
ನನ್ನ ನಾನು ವಿಸ್ತರಿಸಿಕೊಂಡು
ಹಕ್ಕಿಪಿಕ್ಕಿಗಳಿಗೆ ಆಸರೆಯ ನೀಡಿ
ತಂಪು ನೇರಳ ನೀಡಿ, ಪ್ರಕೃತಿಯ ಭಾಗವಾಗಿದ್ದೆ...!!
ಸ್ವಾರ್ಥ ಮಾನವನೆ ನಿನ್ನ ವಿಕೃತ
ಮನಸ್ಸಿನ ಮುಂದೆ ಪ್ರಕೃತಿಯೊಳ
ನಮ್ಮ ಜೀವಕೆ ಬೆಲೆಯುಂಟೆ..?
ನನ್ನ ಬುಡಕೆ ಹಾಕಿದ ಕೊಡಲಿ ಪೆಟ್ಟಿಗೆ
ಮುಂದೆ ಕಾದಿದೆ ಪ್ರತಿಪೆಟ್ಟು ನಿನಗೆ ಅರಿವೂಂಟೆ......!!!
ನಿಂತಾಗಲೊಮ್ಮೆ ಮನವ ಸೇರಿದ ಸೊಲ್ಲ ನೆನೆದು
ಕುಳಿತಾಗಲೊಮ್ಮೆ ಕಲಿತ ನುಡಿಯ ಸೇರಿಸಿ
ಮನಸೊಳಗೆ ಕಾಣದೆ ಬಚ್ಚಿಟ್ಟು ಕುಳಿತ ಪದವ ಹುಡುಕಿ
ಮರೆಯಾಗದೆ ಕಣ್ಮುಂದೆ ಸುಳಿದಾಡುವ ಶಬ್ಧವ ಹೆಕ್ಕಿ
ಮನಸ ಕಾಡುತಿರುವ ಮರೆಯಲಾಗದ ನೆನಪ ಪದಗಳಲೆ ಜರಿದು
ಬದುಕ ಹಸನಾಗಿಸಿದ ಸವಿಯ ನನಸ ಮತ್ತೊಮ್ಮೆ ನೆನೆದು
ಜೊತೆಯಾಗಿಯೇ ಇದ್ದು ನನಸಾಗದ ಕನಸ ಮೇಲೆ ಮುನಿದು
ಬದುಕ ಜೊತೆ ಜೊತೆಗೆ ಬಂದವರ ಹರಸಿ ಹಾರೈಸಿ
ಅರ್ಧಹಾದಿಯಲೆ ಸರಿದು ನಿಂತವರ ಮೇಲೆ ವರದಿ ಒಪ್ಪಿಸಿ
ಪಾಠ ಕಲಿಸಿದ ಕ್ಷಣ ಮನಕೆ ಮತ್ತೊಮ್ಮೆ ವಂದಿಸಿ
ಕಾಪಾಡಿದ ಜೀವಗಳಿಗೆ ಧನ್ಯವಾದ ಅರ್ಪಿಸಿ
ಹೇಳಬೇಕಾದ ಮಾತು ರೀತಿ ನೀತಿ ಶಾಂತಿ ಕ್ರಾಂತಿಗಳ ಪದಗಳಲೇ ಬೆರೆಸಿ
ಜೀವ ಜೀವಗಳ ವಿವಿಧ ಭಾವ ಭಾವನೆಗಳ ಸಾಲುಗಳಲಿ ಮೇಳೈಸಿ
ಮೂಡುತಿರುವ ಕವಿತೆಗಳು
ಮಾಡುತಿಹುದು ಮನವ ಸೊಗಸು,
ಅಡಗಿ ಕುಳಿತಿದ್ದ ಕವಿ ಮನವ ಜಗಕೆ ಪರಿಚಯಿಸಿ