ಹರಿದ ಬ್ಯಾಗಿಗೆ
ಬಿದ್ದಿತ್ತು ಸುಮಾರು ಕಡೆ ಹೊಲಿಗೆ
ಕಿತ್ತು ಹೋದ ಬ್ಯಾಗಿನ ಜಿಪ್ಪಿಗೆ
ಹಾಕಿದ್ದ ಪಿನ್ನುಗಳು ಮಾಡಿದ್ದವು ಸುಲಿಗೆ
ಬ್ಯಾಗಿನೊಳಗೆ ತುಂಬಿದ್ದ ಪುಸ್ತಕದ ಗಂಟು
ಬೆಸೆದಿತ್ತು ಬ್ಯಾಗು ಹೊತ್ತವನ ಕನಸುಗಳೊಂದಿಗೆ ನಂಟು
ಆ ಬ್ಯಾಗಿನೊಳಗೆ ಪುಸ್ತಕ ಜೋಡಿಸುವ ಜೊತೆಜೊತೆಗೆ
ಜೀವ ತೆರೆದಿತ್ತು ತನ್ನೊಳಗೆ ಭವಿಷ್ಯದ ಕನಸುಗಳ ಮಳಿಗೆ
ಮಳೆಗಾಲದಲಿ ಮಣ್ಣಲಿ ಬಿದ್ದ ಗುಂಡಿಯ ಹಾರುವ ರಭಸಕೆ
ಮಣ್ಣ ಸೇರಿತ್ತು ಕಿತ್ತು ಭುಜದ ಮೇಲಿದ್ದ ಪುಸ್ತಕದ ಜೋಳಿಗೆ
ಅದು ನೋಡಿ ನಡಯುವವರ ಮನಸಾಕ್ಷಿಯ ಅಳೆಯುವ ಘಳಿಗೆ
ಕಾಣದಂತೆ ನಡೆದ ಜನರ ಕಂಡು ಮುಸಿಮುಸಿ ನಕ್ಕಿತ್ತು ಮಾನವೀಯತೆಯು ಒಳಗೊಳಗೆ
ಎತ್ತವರಿಗೆ ದೊಡ್ಡ ದೊಡ್ಡ ವಿದ್ಯೆಯ ಕಲಿಸುವಾಸೆ
ಓದಿ ದೊಡ್ಡವನಾಗಬೇಕು ಬಡತನ ನೀಗಬೇಕೆಂಬುದು ಓದುವವನ ಮಹದಾಸೆ
ದುಡ್ಡಿದ್ದವರಿಗಷ್ಟೆ ಓದಬೇಕೆಂದು ವಿದ್ಯೆಯು ತೋರಲು ವರಸೆ
ಓದಿನ ಬಗೆಗೆ ಇರುವ ಕನಸುಗಳನ್ನೆಲ್ಲ ಮಾಡುಬಿಡುವರು ಖುಲಾಸೆ
ಹೇಳುತ್ತಿದ್ದರು ದುಡ್ಡು ದೊಡ್ಡಪ್ಪ, ವಿದ್ಯೆ ಅವರಪ್ಪ
ಈಗ ಕಲಿತ ವಿದ್ಯೆಗೆ ಎಲ್ಲಿ ಹೋದರು ಹಾಕರು ಸೊಪ್ಪ
ಈಗ ದುಡ್ಡು ಕೊಟ್ಟರೆ ಎಂಥ ವಿದ್ಯೆಗೂ ಅವರೆ ಅಪ್ಪ
ಸಾಮಾನ್ಯ ಮನುಷ್ಯ ಕಣ್ಣ ಮಿಟಿಮಿಟಿ ಮಾಡುತ ನೋಡತಲಿರಬೇಕು ಆಗಿ ಬೆಪ್ಪ
ಕಷ್ಟಗಳಲ್ಲಿ ಸುಖವಂದಿರುವುದು
ತಿಳಿದರೇ ನೀ ಜಗ್ಗುವುದಿಲ್ಲ
ಸುಖದಿಂದೆ ಹಲವು ಕಷ್ಟಗಳ ಸರಪಳಿ ಇರುವುದು, ಅರಿತರೇ ಜಂಬದಿಂದಿರಲು ಸಾದ್ಯವಿಲ್ಲ
ಕಷ್ಟ ಸುಖಗಳನ್ನು ಸಮನಾಗಿ ಸ್ವೀಕರಿಸಿದರೆ ವ್ಯತ್ಯಾಸ ಪಡಿಸಲು ಅವಕಾಶಗಳಿಲ್ಲ.
ಸುರಿಯೋ ಮಳೆ
ನಿನಗಾಗಿ ಕಾದಿದೆ ಇಳೆ
ನೀನಿಲ್ಲದೆ ಇಳೆಯಲಿಲ್ಲ ಕಳೆ
ನೀ ಬಂದು ಕಳೆದಾಕು ನೋವಿನ ಕೊಳೆ
ನೀ ಬಂದು ತೊಳೆಯ ಬೇಕು ರೈತನ ಕಣ್ಣೀರು
ನೀನಿದ್ದರೇನೆ ಅವರ ಬದುಕು ಪನ್ನೀರು
ನೀರಿಲ್ಲದಿದ್ದರೆ ಎಲ್ಲಿಂದ ಬರಬೇಕು ಹಸಿರಾದ ಬೆಳೆ
ಬೆಳೆ ಇಲ್ಲವೆಂದರೆ ಅವರಿಗೆಲ್ಲಿದೆ ಈ ಭೂಮಿಯಲಿ ಬೆಲೆ
ನೀನಿಲ್ಲದೆ ದಾನ ಮಾಡಿರುವರು ಜೀವವ ಯಮನಿಗೆ
ಕಿಂಚಿತ್ತಾದರು ಬೆಲೆಕೊಡರು ಯಾರು ಅವರ ಕಣ್ಣೀರಿಗೆ
ಜೀವ ಉಳಿಸುವ ನೀನೆ ದೂರ ಸರಿದರೆ ಮತ್ತ್ಯಾರು ಅವರಿಗೆ
ಜೀವದಾನ ನೀಡು ನೀನು ಸುರಿದು ಕೆರೆ ಕಟ್ಟೆ ತುಂಬುವರೆಗೆ
ನೀನು ಆಗದಿರು ಈ ಜನರಂತೆ ನಿಷ್ಕರುಣಿ
ನೀನಾಗು ಈ ಜಗಕ್ಕೆಲ್ಲ ಜೀವಧಾರಿಣಿ
ಕಾದಿರುವಳು ತನ್ನೊಡಲಲಿ ಹಸಿರ ನೋಡಲು ಧರಣಿ
ನೀನು ಇನ್ನೂ ಕಾರಣವಾಗಬೇಡ ಆಗಲು ಆತ್ಮಹತ್ಯೆ ಸರಣಿ
ನೇಸರ ಸರಿದ ಇಳಿ ಸಂಜೆಯಲಿ
ತನುವ ಸೋಕುವ ತಂಪು ಗಾಳಿಯಲಿ
ಗೂಡು ಸೇರುವ ಹಕ್ಕಿಗಳ ಇಂಚರದಲಿ
ಪ್ರಕೃತಿ ಅಪ್ಪಿರಲು ಮೌನವನು ಪ್ರಶಾಂತತೆಯಲಿ
ಕೈ ಬೆರಳುಗಳು ತಾವಿಬ್ಬರು ಜೊತೆಗೆಂದು ಬೆಸೆದಿರಲು
ಇಬ್ಬರ ಕಣ್ಣುಗಳು ಕಣ್ಣ ಮುಚ್ಚಾಲೆಯಾಡುತ ಸೇರಿರಲು
ನೋವುನಲಿವಲಿ ನಿನ್ನೊಟ್ಟಿಗೆಂದೂ ಹೆಜ್ಜೆ ಜೊತೆಯಾಗಿರಲು
ತೋಳ ಬಳಸಿ, ಶಿರವ ತಗ್ಗಿಸಿ ಎದೆಗೆ ತನುವು ಒರಗಿರಲು
ಹೇಳುವೆಯೇನು ಮೆಲುದನಿಯಲೊಂದು ಪಿಸುಮಾತು
ಈ ಜಗದಲಿ ಇನ್ನೇನೂ ಬೇಡ ನನಗೆ ನಿನ್ನ ಹೊರತು
ಬದುಕಲು ಆಗದು ಎಂದೂ ನಾನು ನಿನ್ನನು ಮರೆತು
ಇರಬೇಕು ನಿನಗಾಗಿ ನಾನು, ನನಗಾಗಿ ನೀನೆಂದು ಬೆರೆತು